Pages

ಮಂಗಳವಾರ, ಫೆಬ್ರವರಿ 19, 2013

ಮತ್ತಾಡುವ ಆಸೆ

ಮತ್ತೆ ಮಗುವಾಗಬೇಕೆಂಬ ಆಸೆ ...
ನನ್ನದೆ ಲೋಕದಲ್ಲಿ ತೆಲಾಡುವ ಆಸೆ...
ಅಮ್ಮನ ಮುದ್ದಿನ ಅಪ್ಪುಗೆಯ ಆಸೆ...
ಯಾವುದೆ ದೂರಾಚನೆಯಿಲ್ಲದೆ ಮತ್ತಾಡುವ ಆಸೆ ...
ಆದರೆ ಇಗ ಆ "ಬಾಲ್ಯ" ಸಿಗಲಾರದೆಂಬುದೆ ...
"ನಿರಾಸೆ"

ಭಾನುವಾರ, ಡಿಸೆಂಬರ್ 11, 2011

ಮರಿಚಿಕೆ

ಮನಸಿನ ಆಸೆ ..
ಆಗಿರುವುದು ನಿರಾಸೆ
ಮರಿಚಿಕೆಯಾಯಿತೆ ಮನದಾಸೆ ..

ಮತ್ಯಾವುದೋ ಕನಸು ..
ಆದಾಗದು ಎಂದಿಗೂ ನನಸು ...
ಮರಿಚಿಕೆಯಾಯಿತೆ ಕನಸು ...

ಮರೆತರೂ ಮರೆಯಲಾಗದ ನೆನಪು ..
ಕಾಡುತಿದೆ ಕಹಿನೆನಪು..
ಮರಿಚಿಕೆಯಾಯಿತೆ  ಸಿಹಿ ನೆನಪು...

ಮತ್ಯಾಕೋ ಇನ್ನಷ್ಟು ಹಂಬಲ..
ಮುಂದೆ ಸಾಗಲೇಬೇಕೆಂಬ ಛಲ..
ಮರಿಚಿಕೆಯಾಗದಿರಲಿ ಆ ಫಲ...


(ಅದೆಷ್ಟೋ  ದಿನಗಳ ನಂತರದ ಒಂದು ಪುಟ್ಟ  ಪ್ರಯತ್ನ)


ಮಂಗಳವಾರ, ಜುಲೈ 19, 2011

"ಸ್ವಾಮಿ ನಾವಿರೋದೇ ಹೀಗೆ"!!!!!

ನನಗೆ ಇತ್ತೀಚಿನ ದಿನಗಳಲ್ಲಿ ಯಾಕೊ ದಪ್ಪದವರನ್ನು ನೋಡಿದ್ರೆ " ಅಯ್ಯೋ ಪಾಪ" ಅನಿಸುತ್ತಿದೆ. ಯಾಕೆಂದ್ರೆ ನಾನು ಅವರ ಸಾಲಿನ ಮೊದಲ ಅಭ್ಯರ್ಥಿ! ಅವರ ಕಷ್ಟ ನಂಗೆ ಗೊತ್ತು ಸ್ವಾಮಿ!! ಒಂದು ಮದುವೆ ಮುಂಜಿಗೆ ಹೋಗಲಿಕ್ಕೆ ಇಲ್ಲ , ಅಲ್ಲಿ ಬಂದು ಬಳಗದವರು ಸಿಕ್ಕಿ ಕುಶೋಲೋಪರಿ ವಿಚಾರಿಸಿ"ನಿನ್ನ ಪರಿಚಯ ಆಗಲಿಲ್ಲ ಅಂತ ಅಂದಾಗ ನಮ್ಮ ಬಯೋಡಟಾ ಎಲ್ಲ ಹೇಳುವಷ್ಟರಲ್ಲಿ ಪಕ್ಕದಲ್ಲಿ ಕುಳಿತವರ  ಕಮೆಂಟ್ "ನೀನು ಈಗ ದಪ್ಪ ಆಗಿ ನಿನ್ನ ಪರಿಚಯವೇ  ಸಿಕ್ಲಿಲ್ಲ ". ಇನ್ನು ಕೆಲವರು " ನೀನು ದಪ್ಪ ಆಗಿದ್ದಿಯಲ್ಲ. ಮುಂಚೆ ನೀನು ತುಂಬಾ ಸಪೂರ ಇದ್ದಿಯಲ್ವಾ .....  ನೀನು ಸ್ವಲ್ಪ ಸಣ್ಣಗಿದ್ದರೆ ಚೆನ್ನಾಗಿರೋದು" ...ಎಂಬ ಉಚಿತ ಸಲಹೆ ಬೇರೆ.

ನನ್ನ ಗೆಳಯನೊಬ್ಬ ನಂಗೆ  " ಡುಮ್ಮಿ" ಎಂದು ನಾಮಕರಣ ಬೇರೆ ಮಾಡಿಬಿಟ್ಟಿದ್ದಾನೆ. ನನ್ನ ಪುಟ್ಟದಾದ ಹೆಸರಿಗೆ ಎಷ್ಟು ಬೇಸರ ಆಗಿರದು ಹೇಳಿ... ?
ನನ್ನ ಕೆಲ ಗೆಳೆಯರೋ " ನೀ ಯಾವ ಅಕ್ಕಿ ತಿನ್ನುತ್ತಿ ಮಾರಾಯ್ತಿ? ನಂಗೆ ಸಹ ಕಳುಹಿಸಿಕೊಡು..." ಅಂತಾರೆ ಕೀಟಲೆಗಾಗಿ.
ಇನ್ನು  ನನ್ನ ಅಂಟಿಯವರೋ " ಇಷ್ಟು ಸಣ್ಣ ಪ್ರಾಯಕ್ಕೆ ಹೀಗೆ ದಪ್ಪ ಆದ್ರೆ ಮತ್ತೆ  ಮತ್ತೆ ಬಿ.ಪಿ , ಶುಗರ್ ಬರುತ್ತೆ .. ಜಾಗ್ರತೆ ಮಾಡು. ಸ್ವಲ್ಪ ನಿನ್ನ ತೂಕ ಇಳಿಸು ಎಂದಾಗ ಹೂಂ ಎಂದು ನನ್ನ ತಲೆ ಅಲ್ಲಾಡಿಸುತ್ತೇನೆ.

ಇವರೆಲ್ಲರ  ಮಾತಿಗೆ ಪುಷ್ಟಿಯೊ ಎಂಬಂತೆ ಮೊನ್ನೆ ತುಂಬಿ ತುಳುಕುತ್ತಿದ್ದ  ಮಂಗಳೂರಿನ ಸೀಟಿ ಬಸ್ಸಿನಲ್ಲಿ ನಾನು ಹತ್ತಿದೆ, ಮುಂದಿನಿಂದ ಕಂಡೆಕ್ಟರ್ ಮಹಾಶಯ ಹಿಂದೆ ಹೋಗಿ ಅಂದ್ರೆ ಹಿಂದಿನಿಂದ ಕ್ಲಿನರ್ ಮಹಾಶಯ ಮುಂದೆ ಹೋಗಿ ಎಂದು  ಕಿರುಚಾಡುತ್ತಿದ್ದ. ನಾನೋ ಬಸ್ಸಿನಲ್ಲಿ ನನ್ನ ಪು(ದ)ಟ್ಟ ದೇಹವನ್ನು ಹೇಗಪ್ಪಾ ಸಂಭಾಳಿಸಲಿ. ಅದರೆಡೆಯಲ್ಲಿ ಸ್ಕೂಲ್ ಮಕ್ಕಳ ಬ್ಯಾಗ್ 9 ತಿಂಗಳ ಗರ್ಭಿಣಿಯಂತೆ ತುಂಬಿ ತುಳುಕುತಿತ್ತು. ಬಸ್ಸಿನಿಂದ ಇಳಿಯುವವರ ಕಣ್ಣುಗಳು ನನ್ನನ್ನು ಕೆಕ್ಕೆರಿಸಿ ನೋಡಿದಾಗ ನಂಗೆ ಎಲ್ಲಿಲ್ಲದ ಅಸಾಯಕತನ!.

ಹಾಗದರೆ ದಪ್ಪ ಆಗಿದ್ದು ನನ್ನ ಆಕ್ಷಮ್ಯ ಅಪರಾಧವೆ? ಹೌದು.....ಎನ್ನುತ್ತಿದೆ ನನ್ನ ಮನಸ್ಸು ಕೆಲವೊಮ್ಮೆ!.

ಕಡೆಗೂ ೧೫ ದಿನ  ಊಟ ಬಿಟ್ಟಾದರೂ ಸರಿ ಸಪೂರ ಆಗಲೇ ಬೇಕೆನ್ನುವ ಒಂದು ನಿರ್ಧಾರಕ್ಕೆ ಬಂದೆ. ಹಾಗೊ ಹೀಗೊ ಡಯೇಟ್ ಚಾರ್ಟ್ ತಂದೆ. ಅದರ ಪ್ರಕಾರ  1 ವಾರ ಬರೇ ಹಣ್ಣು ಹಂಪಲನ್ನು ತಿಂದು ಜೀವನ ಮಾಡಬೇಕಿತ್ತು.ಕಡೆಗೂ ಒಳ್ಳೆಯ ದಿನ ನೋಡಿ ನನ್ನ ಡಯಟ್ ನ್ನು ಶುರು ಹಚ್ಚಿಕೊಂಡೆ. ನನ್ನ ಪತಿರಾಯರು ಮತ್ತು ಮಗುವಿಗೆ ನನ್ನ ಕೈ ಆಡುಗೆಯನ್ನು ಚಾಚು ತಪ್ಪದೆ ಉಣಬಡಿಸಿದೆ. ಆದರೆ  ಅವರು ಉಟ ಮಾಡುವಾಗ ನಾನು ಮಾಡಿರುವ ಅಡಿಗೆ ರುಚಿ ಹೇಗಿರಬಹುದು ಎಂದು ಮನಸ್ಸಿಗೆ ಅನಿಸದಿರಲಿಲ್ಲ. ಹೇಗಾದರು ಆ  ದಿನ ನನ್ನ ಮನಸ್ಸನ್ನು ಹಿಡಿತದಲ್ಲಿ ಇರಿಸಿದೆ. ರಾತ್ರಿಯಾಗುವಷ್ಟರಲ್ಲಿ ನನ್ನ ಹಸಿವು ಹದಿನೈದು ದಿನ ಊಟಮಾಡದಿದ್ದ ಹಾಗೆ ಅನಿಸಿತು. ನಮ್ಮವರ ಊಟ ಮುಗಿಯುತಿದ್ದಂತೆ ಚೂರು ಪಾರು ಅನ್ನ ಸಾರು ಉಳಿದಿತ್ತು. ಭೀಮನ ಹೊಟ್ಟೆಗೆ ಕಾಸಿನ ಮದ್ದು! ಆ ಅನ್ನ ಸಾರಿಗೆ ಬೇಸರವಾಗಬಾರದಲ್ಲ! ಕಡೆಗೂ ನನ್ನ ಡಯಟ್ ಚಾರ್ಟ್ ನ್ನು  ಬದಿಗಿರಿಸಿ ಊಟ ಮಾಡಿದಾಗ ಆದ ಸಂತೋಷ ಹೇಳತೀರದು. ಸಂತೋಷ ನನಗಲ್ಲ ..ಅನ್ನ ಸಾರಿಗೆ ಮತ್ತು ನನ್ನ  ಹೊಟ್ಟೆಗೆ. ಯಾಕೆಂದ್ರೆ ಹೊಟ್ಟೆ ಹಸಿವು ಅಷ್ಟರ ಮಟ್ಟಿಗೆ ಇತ್ತು.ಹಾಗಗಿ ಇರುವ ಹಾಗೆಯೇ ಇರೋಣ ಎಂದು ಧ್ರಡ ಸಂಕಲ್ಪ ಮಾಡಿದ್ದೇನೆ.

 ನಾನು ಸಪೂರ ಆದಲ್ಲಿ ನನ್ನ ದಪ್ಪದಿಂದ ಆಗುವ ಕೆಲವು ಪ್ರಯೋಜನಗಳು ಇಲ್ಲದಾಗಬಹುದೆಂಬುದು ಈಗಿನ ನನ್ನ ವಾದ..ಯಾಕೆಂದ್ರೆ ಯಾವುದೇ ಸಭೆ ಸಮಾರಂಬಗಳಲ್ಲಿ ಎದ್ದು ಕಾಣುದು ದಪ್ಪದವರು ತಾನೇ? ಮಕ್ಕಳಿಗೆ " ಓ ದಪ್ಪದ ಅಂಟಿ ಕರಿಯಪ್ಪಾ " ಅಂದಾಗ ಮಗು ಚಾಚು ತಪ್ಪದೆ ನನ್ನ ಹತ್ತಿರ ಬಂದು ನನ್ನ ಕರಿಯುತ್ತೆ. ಪಾಪ ಅದಕ್ಕಾದರೂ ಉಪಕಾರ ನನ್ನ ದಪ್ಪದಿಂದ!
ಹಾಗಗಿ ನಾನು ದಪ್ಪವೇ ಇರೋಣ ಎಂಬ ನಿರ್ಧಾರಕ್ಕೆ ಬಂದೆ. ಯಾಕೆಂದರೆ "ಮದಗಜಗಮನೆ" ಎಂದು ಕರೆಯೋದು ದಪ್ಪದವರನ್ನೆ ತಾನೆ?

ಆದ್ರೆ  ನನ್ನ ಹೆಸರು ಬರೆದು ಮತ್ತು ನನ್ನ ದಪ್ಪದ ಬಗ್ಗೆ " ನೊ ಕಮೆಂಟ್ಸ್ ಪ್ಲೀಸ್ " ಎಂದು ಬೋರ್ಡ್ ಹಾಕುವಾಂತ ತಿರ್ಮಾನಕ್ಕೆ ಬಂದ್ದಿದ್ದೇನೆ....

ಯಾಕೆಂದ್ರೆ "ಸ್ವಾಮಿ ನಾವಿರೋದೇ  ಹೀಗೆ"!!!!!

ಶನಿವಾರ, ಜುಲೈ 2, 2011

ನೋವಿನ ವಿದಾಯ



ಹುಚ್ಚು ಕುದುರೆ ಮನಸ್ಸು 
ಕಾಣುತ್ತಿತ್ತು ಕನಸು 
ಗೊತ್ತಿದ್ದರೂ ಆದಾಗದು
ಎಂದಿಗೂ  ನನಸು...

ಹೇಳಿದೆ ನೀ ಎನಗೆ  ಚೆನ್ನ..
ಕರೆದೆ ನಾ ನಿನ್ನ ಚಿನ್ನ 
ಕೊಟ್ಟೆ ನನ್ನ ಹ್ರದಯವನ್ನ 
ಮತ್ಯಾಕೆ  ದೂರ ತಳ್ಳಿದೆ ಎನ್ನ..?

ನೆನಪೊಂದು  ಬೆಂಬಿಡದ ಬೇತಾಳ
ಗಾಯ ನೋವುಗಳೆಲ್ಲ  ಬಹಳ ಆಳ...
ಉದುರುತಿದೆ ಕಣ್ಣೀರು ಕಣ್ಣಂಚಿನಲಿ
ಬೆಂದಿಹುದು ಮನ ನಿನ್ನ ಬಲೆಯ ಜಾಲದಲಿ...

ಮರೆತರೂ ಮರೆಯಲಾರದ ನೆನಪು 
ಮಾಡಿರುವೆಯಲ್ಲ್ಲ ಅಚ್ಚಳಿಯದ ಛಾಪು
ಆರ್ಭಟಿಸುತಿದೆ  ಮೌನದ ಅಲೆ
ಉರಿಯುತಿದೆ ಮನದೊಳಗೆ ಅಗ್ನಿಯ ಜ್ವಾಲೆ..

ಬೇಡವಾಗಿದೆ ನಿನ್ನ ಕಣ್ಣಮುಚ್ಚಾಲೆ
ಮಗದೊಮ್ಮೆ ತೋರಿಸದಿರು ನಿನ್ನ ಲೀಲೆ ..
ಕಾದಿಹೆನು ಸೂರ್ಯನ ಉದಯಕ್ಕಾಗಿ
ಮತ್ತೆ ಜೀವನದ ಹೊಸ ಹೆಜ್ಜೆಗಾಗಿ....









ಗುರುವಾರ, ಜೂನ್ 23, 2011

ನೀವು ಕನಸು ಕಾಣುತ್ತೀರಾ???



ಕನಸು ಒಂದು ಅನುಭವ. ಸನ್ನಿವೇಶಗಳನ್ನು ನಿಜವಾಗಿಯೂ ಅನುಭವಿಸಿದ ಹಾಗೇ ಭಾಸವಾಗುತ್ತದೆ. ಧ್ವನಿ , ರುಚಿ,  ವಾಸನೆ .. ಇತ್ಯಾದಿ. ಕೆಟ್ಟ ಕನಸು ಕಂಡಾಗ  ಭಯದಲ್ಲಿ  ನಾವು ಬೆವರುತ್ತೇವೆ, ಬೇಸರದ ಕನಸು ಬಿದ್ದಾಗ ನಾವು ಅಳುತ್ತೇವೆ .. ಹೀಗೆ ಹಲವಾರು ರೀತಿಯಲ್ಲಿ ಕನಸು ಭಾಸವಾಗುತ್ತದೆ. ಮಕ್ಕಳಿಂದ  ಮುದುಕರವರೆಗೆ ಎಲ್ಲರೂ ಕನಸನ್ನು ಅನುಭವಿಸುತ್ತಾರೆ. ನಾಯಿ ಬೆಕ್ಕುಗಳು ಕೂಡ ಕನಸು ಕಾಣುತ್ತವೆ......
ಕನಸುಗಳು ಮನುಷ್ಯನ ಅನುಭವದ ಬಯಕೆಯ ಭಂಡಾರ.

 ನಾವು ಕಾಣುವ ಕನಸುಗಳಿಗೆ ಏನು ಅರ್ಥ? ಮೊನ್ನೆಯೊಬ್ಬರು ಹೇಳುವುದನ್ನು ಕೇಳಿಸಿಕೊಂಡೆ "  ಒಳ್ಳೆ ನಿದ್ರೆ   ಒಳ್ಳೆ ಕನಸು ಮಾರಾಯ್ರೆ ! ಅಷ್ಟರಲ್ಲಿ  ಮಗಳು ಬಂದು ಎಬ್ಬಿಸಿದಳು....ಕೆಲವರಂತೂ "ನಂಗೆ ರಾತ್ರಿ ನಿದ್ರೇನೆ ಇಲ್ಲ .ಒಂದರ  ಮೇಲೆ ಒಂದು  ಕೆಟ್ಟ ಕೆಟ್ಟ ಕನಸು.." ಮತ್ತೆ ಕೆಲವರು ಮುಂದೆ ಬರುವ ಸನ್ನಿವೇಷಗಳ ಸೂಚಕ .. ನಾವು ಕಂಡ ಕನಸಿನ ಹಾಗೆ ಆಗುತ್ತೆ ಎನ್ನುವವರು ಇದ್ದಾರೆ .ಕೆಲಮಕ್ಕಳು { ೭ ವಯಸ್ಸಿನ ನಂತರವೂ}  ಹಾಸಿಗೆಯಲ್ಲಿ ಉಚ್ಚೆ ಮಾಡಿ ನಾವು toilet ಹೋಗಿ ಉಚ್ಚೆ ಮಾಡಿದ ಹಾಗೆ ಆಯಿತು. ಆದ್ರೆ ಹಾಸಿಗೆಯಲ್ಲಿ ಉಚ್ಚೆ ಮಾಡಿದ್ದು ಮತ್ತೆ ಅನುಭವಕ್ಕೆ ಬಂತು ಅಂತಾರೆ.
ಕೆಲವರು ಕನಸು ಬಿದ್ದರೆ  ಅದನ್ನು  ಮೆಲುಕು ಹಾಕಲು ಪ್ರಯತ್ನಿಸುತ್ತಾರೆ . ಕೆಲವೊಂದು ಕನಸುಗಳು ನೆನಪಿಗೆ ಬರುವುದಿಲ್ಲ. ಇನ್ನೂ ಕೆಲವರು ಕನಸಿನಲ್ಲಿ ಕಂಡ ದ್ರಶ್ಯಗಳು ಒಳ್ಳೇದೆ ? ಕೆಟ್ಟದೇ ? ಎಂದು ಹಳೆ ಪಂಚಾಂಗ ಹಿಡಿದು ನೋಡುತ್ತಾರೆ .
ನಾವು ಸಣ್ಣವರಿರುವಾಗ  "ರಾಮ ರಾಮ " ಎಂದು ಹೇಳಿದ್ರೆ  ಕೆಟ್ಟ ಕನಸು ಬಿಳುವುದಿಲ್ಲ ಎಂದು ಹೇಳಿ ಸಮಾಧಾನ ಮಾಡ್ತಿದ್ರು.

ಹಾಗಾದ್ರೆ ಕನಸು  ಅಂದ್ರೆ ಏನು ?

ಕನಸಿನ  ಬಗ್ಗೆ  ವಿಷಯಗಳನ್ನು ಚೆನ್ನಾಗಿ  ಜಗತ್ತಿಗೆ ತೋರಿಸಿಕೊಟ್ಟ ಮಹಾ ಮನೋವಿಜ್ಞಾನಿಗಳು  ಫ್ರಾಯ್ಡ್  ಮತ್ತು ಯುಂಗ್ . ಫ್ರಾಯ್ಡ್ ರ ಪ್ರಕಾರ ಕನಸುಗಳು ಸುಪ್ತ ಮನಸ್ಸಿನಲ್ಲಿ ಹುದುಗಿರುವ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ಇರುವ ಮಾರ್ಗ ಎಂದು ಹೇಳಿದ್ದಾರೆ .ಇವರ ಪ್ರಕಾರ ನಮಗೆ ಇಷ್ಟವಾಗದ ಎಷ್ಟೋ ಭಾವನೆಗಳನ್ನು ( ಕೋಪ ... ನೋವು ..ಇತ್ತ್ಯಾದಿ) ನಮ್ಮ ಸುಪ್ತ  ಮನಸ್ಸಿನೊಳಗೆ ತಳ್ಳಿ ಬಿಡುತ್ತೇವೆ. ನಾವು ನಿದ್ರಿಸುವಾಗ ಸುಪ್ತ ಮನಸ್ಸಿನೋಳಗಿರುವ ವಿಷಯಗಳು ಮೇಲೇರಿ ಬರುತ್ತದೆ.ಆ ಅನುಭವವೇ  ಕನಸು..ಕನಸು ನಮ್ಮ ಮನಸ್ಸಿನ ಸಮತೋಲನ ಕಾಪಾಡಲು ಸಹಾಯವಾಗುತ್ತದೆ ಎಂಬುದು  ಅವರ ವಾದ. ಮನಸ್ಸಿನಲ್ಲಿರುವ ಆತಂಕ ಕನಸುಗಳಲ್ಲಿ ಕಂಡು ನಂತರವೂ  ಸುಪ್ತ ಮನಸ್ಸಿನ ಒತ್ತಡ ಕಡಿಮೆಯಾಗದಿದ್ದರೆ , ಮಿತಿಮೀರಿದ ಮಾನಸಿಕ ದಂದ್ವ ತುಮುಲಗಲಿದ್ದಲ್ಲಿ ನಮ್ಮ ಮಾನಸಿಕ ಸಮತೋಲನ ವ್ಯವಸ್ಥೆ ಕುಸಿದು ನಾವು ಕೆಲವೊಂದು ಮಾನಸಿಕ ಅಸ್ವಸ್ಥಗೆ  ಒಳಗಾಗುತ್ತೇವೆ ಎನ್ನುತ್ತಾರೆ ಫ್ರಾಯ್ಡ್ .
ಕೆಲವೊಂದು ಕನಸುಗಳು ಸಾಂಕೇತಿಕವಾಗಿ ನಮ್ಮ ಆಲೋಚನೆ, ಭಾವನೆ ಬಯಕೆಗಳನ್ನು ಪ್ರತಿಬಿಂಬಿಸುತ್ತದೆ. ಇದು ಭಾವನಾತ್ಮಕ ಅನುಭವ.

ಕನಸು ನಮ್ಮ ನಿದ್ರೆಯ ಸಾಮಾನ್ಯ ಅವಿಭಾಜ್ಯ  ಅಂಗ. ಒಂದು ಘಂಟೆ ಕಾಲ ನಿದ್ದೆ ಮಾಡಿದ್ರೆ ಹತ್ತು ಹನ್ನೆರಡು ನಿಮಿಷಗಳ ಕಾಲ ಕನಸು ಬೀಳುತ್ತವೆ. ನಿದ್ರೆಯಲ್ಲಿ ಎರಡು ಹಂತವಿದೆ.
 1.Non rapid eye movement  { ಏನ್. ಅರ್. ಐ ಎಂ }
2. rapid eye movement .{  ಅರ್. ಐ.ಎಂ }

1. Non rapid eye movement  { ಏನ್. ಅರ್. ಐ ಎಂ }
ಈ ಹಂತ ವ್ಯಕ್ತಿಯ ನಿದ್ರೆಯ ಪ್ರಾರಂಬಿಕ ಹಂತ. ವ್ಯಕ್ತಿಗೆ ತನ್ನ ಸುತ್ತ ಮುತ್ತಲಿನ ಆಗು ಹೋಗುಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಅರಿವಾಗುತ್ತದೆ.ವ್ಯಕ್ತಿ ತಾನು ಪೂರ್ತಿ ಎಚ್ಚರದಿಂದ ಇದ್ದೆ ಎಂದು ಭಾವಿಸುತ್ತಾನೆ.ಆದರೆ ಅವನು ಎಚ್ಚರದಲ್ಲಿ ಇರುವುದಿಲ್ಲ.  

2. rapid eye movement .{  ಅರ್. ಐ.ಎಂ }
ಅರ್. ಐ.ಎಮ್ ಹಂತದಲ್ಲಿ ವ್ಯಕ್ತಿಯ  ಕಣ್ಣಿನ ಗುಡ್ಡೆಗಳು ವಿರಮಿಸುತ್ತವೆ. ಉಸಿರಾಟ , ಹ್ರದಯ ಬಡಿತದಲ್ಲಿ ಸ್ವಲ್ಪ ಬದಲಾವಣೆಗಳಿರುತ್ತದೆ. ಈ ಹಂತಕ್ಕೆ ಮನುಷ್ಯ ನಿದ್ರೆ ಶುರುವಾದ ಒಂದು  ಘಂಟೆಯ ನಂತರ ತಲುಪುವನು.ಯಾವುದೇ ವ್ಯಕ್ತಿಗೆ  ಈ ಹಂತದಲ್ಲಿ ಕನಸುಗಳು ಬೀಳುತ್ತದೆ. ಹಾಗೂ ಈ ಸಮಯದಲ್ಲಿ  ವ್ಯಕ್ತಿಯನ್ನು ಎಬ್ಬಿಸಿದಾಗ,  ಆತ ಕನಸು ಕಾಣುತಿದ್ದುದಾಗಿ ಹೇಳುತ್ತಾನೆ. ಹಾಗೂ ಕನಸಿನ ಬಗ್ಗೆ ಪೂರ್ತಿ ವಿವರ ಕೊಡುತ್ತಾನೆ.

 ಒಂದು ರಾತ್ರಿಯ ನಿದ್ದೆಯಲ್ಲಿ ಸಾಮಾನ್ಯವಾಗಿ  ಒಂದು ಘಂಟೆಯ ಏನ್. ಅರ್. ಐ.ಎಂ ನಿದ್ರೆ  ನಂತರ ಹತ್ತು ನಿಮಿಷಗಳ  ಅರ್. ಐ.ಎಂ ನಿದ್ರೆ , ಮತ್ತೆ ಪುನ: ಏನ್. ಅರ್. ಐ ಎಂ ನಿದ್ರೆಯಾಗುತ್ತದೆ . ಹೀಗೆ  ಒಂದು ರಾತ್ರಿಯ ನಿದ್ರೆಯಲ್ಲಿ ಕನಿಷ್ಠ ನಾಲ್ಕು - ಐದು ಬಾರಿ ಈ ಚಕ್ರ ಪುನರಾವರ್ತನೆ ಆಗುತ್ತದೆ. ಪ್ರತಿ ರಾತ್ರಿ  ವ್ಯಕ್ತಿಯು ಸುಮಾರು ಐವತ್ತು ನಿಮಿಷಗಳ ಕಾಲ ಕನಸು ಕಾಣುತ್ತಾನೆ. ಎಲ್ಲ ಕನಸುಗಳು ನೆನೆಪಿರುದಿಲ್ಲ ಯಾಕೆಂದರೆ ಕನಸು ಕಾಣುವ   ಅರ್. ಐ.ಎಂ ನಿದ್ರೆಯ ನಂತರ  ಏನ್. ಅರ್. ಐ ಎಂ ನಿದ್ರೆ  ಶುರುವಾಗಿ ಮೊದಲು ಬಿದ್ದ ಕನಸುಗಳು ಮರೆಯಾಗುತ್ತದೆ. ನಿದ್ರಾ ತೊಂದರೆ ಇರುವ ವ್ಯಕ್ತಿ ತನಗೆ ಕನಸಿನಿಂದ ನಿದ್ರೆ ಹಾಳಾಯಿತು ಎನ್ನುತ್ತಾನೆ. ಆದರೆ ವಾಸ್ತವ ಅವನು ನಿದ್ರೆಯಿಂದ ಆಗಾಗ ಎಚ್ಚರವಾಗುವುದರಿಂದ ಕನಸುಗಳು ನೆನೆಪಿರುತ್ತವೆ ! ಕನಸು ಹೆಚ್ಚು ಬಿಳಲೂ  ಇಲ್ಲ !

ಕನಸುಗಳನ್ನು ನಾವು  ವಿಭಾಗಗಳಾಗಿ ವಿಂಗಡಿಸಬಹುದು .

1 ಅರ್ಥವಾಗುವ ಕನಸು.
2.ಅರ್ಥವಾಗುವ  ಅಂದರೆ ಗೊಂದಲ ಉಂಟು  ಮಾಡುವ ಕನಸು.
3. ಅರ್ಥವಾಗದ ವಿಚಿತ್ರ  ಕನಸು.

 1 .ಅರ್ಥವಾಗುವ ಕನಸುಗಳು

ಇಲ್ಲಿ ನಮಗೆ ವಸ್ತುಗಳು ನೇರವಾಗಿ ಪ್ರಕಟಗೊಳ್ಳುತ್ತವೆ. ಬಡವನಿಗೆ ತಾನು ಶ್ರೀಮಂತನಾಗುವ ಕನಸು. ಮಕ್ಕಳಿಲ್ಲದವರಿಗೆ  ಮಕ್ಕಳಾಗುವ ಕನಸು. ಇಂತ ಕನಸು ವ್ಯಕ್ತಿಯ ಮನಸ್ಸಿನ ಬಯಕೆ , ಆಲೋಚನೆಗಳನ್ನು ನೆರವಾಗಿ ತೋರಿಸಿಕೊಡುತ್ತದೆ.ಹೀಗೆ ನೇರ ಕನಸನ್ನ ನಾವು ಕಂಡು ಮನಸ್ಸನ್ನು ಹಗುರಗೊಳಿಸಬಹುದು.


2.ಅರ್ಥವಾಗುವ  ಅಂದರೆ ಗೊಂದಲ ಉಂಟು  ಮಾಡುವ ಕನಸು.

ಇಲ್ಲಿ ಸಹ ಕನಸುಗಳು ಅರ್ಥವಾಗುತ್ತದೆ. ಕನಸುಗಳು ನೇರವಾಗಿರುತ್ತದೆ. ಆದ್ರೆ ಅ ಕನಸು ಯಾಕೆ ಬಿತ್ತು ಎಂಬುದು ಅರ್ಥವಾಗದೆ ನಾವು ತಲೆಕೆಡಿಸಿ ಕೊಳ್ಳುತ್ತೇವೆ. ಕನಸ್ಸಿನಲ್ಲಿ  ಕಾಣುವ ಸನ್ನಿವೇಶಗಳಲ್ಲಿ ನಮಗೆ ಆಸೆಯೋ  ಬಯಕೆಗಳೇನೋ   ಇರುದಿಲ್ಲ.  ಅಷ್ಟೊಂದು ಪರಿಚವಿಲ್ಲದ ವ್ಯಕ್ತಿಯೊಬ್ಬರು ನಮ್ಮ ಮನೆಗೆ ಬಂದಂತೆ ಅವರೊಡನೆ ಕುಳಿತು ಸಮಯ ಕಳೆದಂತೆ .. ಇತ್ಯಾದಿ..ಒಂದಕ್ಕೊಂದು ಸಂಬಂದವಿರುದಿಲ್ಲ .ಹೀಗೆ  ಎದ್ದು ಕುಳಿತುಕೊಂಡು ನಾವು ಅದರ ಬಗ್ಗೆ ಎಷ್ಟೋ ಸಲ ಯೋಚನೆ ಮಾಡಿ ತಲೆಕೆಡಿಸಿಕೊಳ್ಳುತ್ತೇವೆ.


3. ಅರ್ಥವಾಗದ ವಿಚಿತ್ರ  ಕನಸುಗಳು .

ಇಲ್ಲಿ ಕನಸಿನ ಪ್ರತಿ ದ್ರಶ್ಯವು ಸಾಂಕೇತಿಕ ನಿಗೂಢ ಅರ್ಥವನ್ನು ಒಳಗೊಂಡಿರುತ್ತದೆ.  ಉದಾ :  ಹುಡುಗಿಯೊಬ್ಬಳು   ದಿನವೂ ವಿಚಿತ್ರ ಮತ್ತು ಭಯಾನಕ ಕನಸುಗಳನ್ನು ಕಾಣುತ್ತಿದ್ದಳು. ತನ್ನನ್ನು ನಿರ್ಜನ ಪ್ರದೇಶದಲ್ಲಿ ಯಾರೋ ಅಟ್ಟಿಸಿಕೊಂಡು ಹೋದಂತೆ ತಪ್ಪಿಸಿಕೊಳ್ಳಲು ಶತಪ್ರಯತ್ನ ಮಾಡಿದರೂ ತಪ್ಪಿಸಿಕೊಳ್ಳಲಾಗದೆ ಅವರು ತನ್ನನ್ನು ಕೊಲ್ಲಲು ಯತ್ನಿಸುತ್ತಾರೆ ಎನಿಸುವಾಗ ಕಿರಿಚಿ ಎಚ್ಚರಗೊಳ್ಳುತ್ತಿದ್ದಳು.
ಆಕೆಯೊಂದಿಗೆ  ಮಾತಾನಾಡಿಸಿ,  ಮನೋವಿಶ್ಲೇಷಣೆ ಮಾಡಿದಾಗ ಅವಳಲ್ಲಿರುವ ಗೊಂದಲಗಳು ಸ್ಪಷ್ಟ ವಾಗಿ ಅರ್ಥವಾಯಿತು. ಅವಳ ಪೋಷಕರು ಅವಳನ್ನು ಮದುವೆಯಾಗದಿರಲು ಒತ್ತಾಯಿಸುತಿದ್ದರು. ಆದರೆ ಅಕೆಗೆ ಮಾಡುವೆಯಗಲು ಇಷ್ಟವಿದ್ದು ಹೆತ್ತವರ ವಿರೋಧ ಎದುರಿಸಲು ಶಕ್ತಳಾಗಿರಲಿಲ್ಲ. ಹಾಗಾಗಿ ಮನಸ್ಸಿನ ದಂದ್ವಗಳು  ಸಾಂಕೇತಿಕವಾಗಿ ಕನಸಿನ ರೂಪದಲ್ಲಿ ಕಾಣಿಸಿತು.
 ಕನಸ್ಸು  ಭವಿಷ್ಯ ಸೂಚಕವಲ್ಲ  ಎನ್ನುತ್ತಾನೆ ಫ್ರಾಯ್ಡ್ . ವ್ಯಕ್ತಿಯ ಮನದಾಳದಲ್ಲಿ ಏನು ಆಸೆ ಇರುತ್ತದೆಯೋ ಅದು ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ . ಮತ್ತೆ ಹಾಗೆಯೆ ಅದು ನಡೆದು ಬಿಟ್ಟರೆ ಕನಸ್ಸು ಭವಿಷ್ಯ ಸೂಚಕ ಎಂದುಕೊಳ್ಳುತ್ತೇವೆ ಅಷ್ಟೇ ! ಆದ್ರೆ ಈ ವಿಷಯದ ಮೇಲೆ ಇನ್ನೂ ಅಧ್ಯಯನ ನಡೆಯುತ್ತಿದೆ.

{ಕೆಲಸದ ಒತ್ತಡದಿಂದ ಹಲವಾರು ದಿನಗಳಿಂದ ಈ ಲೇಖನವನ್ನು ಪೂರ್ತಿಗೊಳಿಸಲಾಗದೆ  ನಾನು ಕೂಡ ಈ ಲೇಖನವನ್ನು ಪೂರ್ತಿಗೊಳಿಸಿದ ಕನಸು ಕಂಡಿದ್ದೇನೆ.. ಕಡೆಗೂ ಸಂಪೂರ್ಣಗೊಳಿಸಿ  ನಿಮ್ಮ ಮುಂದೆ ಇಟ್ಟಿದ್ದೇನೆ..( ಕನಸು ನನಸಾಯಿತು!!)  ಇನ್ನೂ ಅನೇಕ ವಿಷಯಗಳಿದ್ದು ಓದುತ್ತಿರುವಾಗಲೆ ನೀವೆಲ್ಲ  ನಿದ್ರೆಗೆ ಜಾರಿ ಕನಸು ಕಾಣದಿರಿ ಎಂದು ಚಿಕ್ಕದಾಗಿ ಬರೆದಿದ್ದೇನೆ..}